ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ (EV) ಬೆಂಕಿ ಅವಘಡಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಇವಿಗಳ ವಿರುದ್ಧ ತನಿಖೆಗೆ ಆದೇಶಿಸಿದೆ. ದೋಷ ಕಂಡುಬಂದಲ್ಲಿ ಸುರಕ್ಷತೆಯ ಮಾನದಂಡ ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಕಂಡುಬಂದಲ್ಲಿ, ಅಂತಹ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ
ದೇಶದ ಪ್ರಮುಖ ಎಲೆಕ್ಟ್ರಿಕ್ ಕಂಪನಿಗಳಾದ ಓಲಾ ಎಲೆಕ್ಟ್ರಿಕ್ (Ola Electric), ಪ್ಯೂರ್ ಇವಿ (Pure EV) ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ವರದಿಯಾಗಿವೆ. ಈಗಾಗಲೇ ಓಲಾ ಎಲೆಕ್ಟ್ರಿಕ್ನ ಭವೀಶ್ ಅಗರ್ವಾಲ್ ಹಾಗೂ ಬೌನ್ಸ್ನ ವಿವೇಕಾನಂದ ಹಳ್ಳೆಕೆರೆ ಸೇರಿದಂತೆ ಹಲವು ದ್ವಿಚಕ್ರ ವಾಹನಗಳ ತಯಾರಕ ಕಂಪನಿಗಳ ಮಾಲೀಕರು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಇದಾದ ನಂತರ ಟ್ವೀಟ್ ಮಾಡಿರುವ ಸಚಿವರು, “ಕಳೆದ ಎರಡು ತಿಂಗಳಲ್ಲಿ ದೇಶಾದ್ಯಂತ ಹಲವು ಎಲೆಕ್ಟ್ರಿಕ್ ದ್ಚಿಚಕ್ರಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ಘಟನೆಗಳಲ್ಲಿ ಹಲವರು ಗಾಯಗೊಂಡಿರುವುದು ಮತ್ತು ಜೀವ ಕಳೆದುಕೊಂಡಿರುವುದು ದುರದೃಷ್ಟಕರ ” ಎಂದಿದ್ದಾರೆ.
“ಈ ಘಟನೆಗಳ ತನಿಖೆಗೆ ನಾವು ತಜ್ಞರ ಸಮಿತಿಯನ್ನು ರಚಿಸಿದ್ದು, ಅವರು ನೀಡಿರುವ ವರದಿಗಳ ಆಧಾರದ ಮೇಲೆ, ಲೋಪ ಎಸಗಿರುವ ಕಂಪನಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಶೀಘ್ರದಲ್ಲೇ ನಾವು ಎಲೆಕ್ಟ್ರಿಕ್ ವಾಹನಗಳಿಗೆ ಗುಣಮಟ್ಟದ ಮಾನದಂಡಗಳನ್ನು ಕೂಡ ಬಿಡುಗಡೆಗೊಳಿಸಲಿದ್ದೇವೆ” ಎಂದಿದ್ದಾರೆ.
“ಯಾವುದೇ ಕಂಪನಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಲೋಪಗಳನ್ನು ಎಸಗಿರುವುದು ಕಂಡುಬಂದಲ್ಲಿ, ಅಂತಹ ಕಂಪನಿಗಳ ವಿರುದ್ಧ ಭಾರಿ ದಂಡ ವಿದಿಸಲಾಗುವುದು ಮತ್ತು ದೋಷವುಳ್ಳ ವಾಹನಗಳನ್ನು ಹಿಂಪಡೆಯುವಂತೆ ಆದೇಶಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾಗಿರುವ ಕುರಿತು ತನಿಖೆ ನಡೆಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಅಗ್ನಿ ಸ್ಫೋಟಕ ಮತ್ತು ಪರಿಸರ ಸುರಕ್ಷತಾ ಕೇಂದ್ರ (ಸಿಎಫ್ಇಇಎಸ್)ಗೆ ನಿರ್ದೇಶಿಸಿದೆ.